Foreword
“ಚರಿತ್ರೆಯು ನಮ್ಮ ಆಂತರ್ಯದ ಅಸ್ಮಿತೆಯ ವಿಕಾಸಕ್ಕೆ ಹಾಗೂ ಭವಿಷ್ಯದ ಅನುಸಂಧಾನಕ್ಕೆ ಅಗತ್ಯವಾಗಿ ಬೇಕಾದ ಪರಿಕರ. ವಿಠಲ್ ಶೆಣೈಯವರ 'ತಾಳಿಕೋಟೆಯ ಕದನದಲ್ಲಿ' ಕಾದಂಬರಿಯನ್ನು ಓದಿದಾಗ, ಹಲವು ಕಾರಣಗಳಿಂದ ಈ ಕೃತಿ ಆಪ್ತವಾಯಿತು, ಭರವಸೆ ಹುಟ್ಟಿಸಿತು. ಈ ಕೃತಿ ಮರೆತು ಹೋದ ಸಾಮ್ರಾಜ್ಯವಾದ ವಿಜಯನಗರದ ದಿನಗಳಿಗೆ ನಮ್ಮನ್ನು ಕರೆದೊಯ್ದು ಮಂತ್ರ ಮುಗ್ಧ ಮಾಡುತ್ತದೆ. ಹಂಪಿ, ಹೊಸಪೇಟೆ, ಕಮಲಾಪುರ, ವಿರೂಪಾಕ್ಷ, ಉಗ್ರನರಸಿಂಹ, ಹಜಾರರಾಮ, ಮಹಾನವಮಿ ದಿಬ್ಬಗಳಲ್ಲಿ ಸಂಭವಿಸುವ ಎಲ್ಲ ಘಟನೆಗಳೂ ಕನ್ನಡಿಗರ ಅಭಿಮಾನದ ಕೇಂದ್ರಗಳಾಗಿವೆ. ಇದು ಓದುಗರಿಗೆ ಭಾವನಾತ್ಮಕವಾಗಿ ಹತ್ತಿರವಾಗುತ್ತದೆ. ಲೇಖಕರ ಚರಿತ್ರೆಯ ಬಗೆಗಿನ ತಿಳುವಳಿಕೆ, ವೈಜ್ಞಾನಿಕತೆಯ ನಿಲುವು ಕೃತಿಯಲ್ಲಿ ಅನೇಕ ಕಡೆ ಉದಿತವಾಗುತ್ತದೆ. ವಿಶೇಷವಾಗಿ ನನ್ನ ಗಮನ ಸೆಳೆದಿದ್ದೆಂದರೆ ಈ ಕೃತಿಯಲ್ಲಿ ಕಥಾನಾಯಕನಷ್ಟೇ ನಿರಕ್ತವಾದ ಪಾತ್ರವಾಗಿ ಚರಿತ್ರೆಯೂ ಇಲ್ಲಿ ವಿಜೃಂಭಿಸಿದೆ. ಇದೇ ಈ ಕೃತಿಯ ಹೆಗ್ಗಳಿಕೆ. ಕನ್ನಡದ ಈಗಿನ ಸಾಹಿತ್ಯಿಕ ಸಂದರ್ಭದಲ್ಲಿ ಆಗಿಹೋದ ಚರಿತ್ರೆಯನ್ನು ಧ್ಯಾನಿಸುವ ಲೇಖಕರು ತೀರ ಕಡಿಮೆ. ವರ್ತಮಾನದ ಜಂಜಡ, ತಲ್ಲಣಗಳನ್ನು ಕಟ್ಟಿ ಕೊಡುತ್ತಿರುವ ಉತ್ತಮ ಲೇಖಕರಿದ್ದಾರಾದರೂ, ಮನಸ್ಸಿನ ಕಂಪನ, ತರಂಗ, ಲಯಗಳನ್ನು ಕೃತಿಗಿಳಿಸುವವರು ವಿರಳ. ಈ ಜಾಗತೀಕರಣದ ಪ್ರಚಂಡ ಪ್ರವಾಹದೆದುರು ಚರಿತ್ರೆಯಂತಹ ವಸ್ತುವಿಷಯಗಳು ಮಂಕಾಗುತ್ತಿವೆ. ನಿನ್ನೆಗಳಿಲ್ಲದೇ ನಾಳೆಗಳಿಲ್ಲ. ನಿನ್ನೆಗಳನ್ನು ನಾವು ಕಂಡರಿಯೆವು, ಗೊಂದಲಮಯ ವರ್ತಮಾನ ಹಾಗೂ ಸುಖಮಯವಾದ ಭವಿಷ್ಯದ ನಾಳೆಯ ಕನಸುಗಳನ್ನು ಪೋಣಿಸುತ್ತಿರುವವರು ನಾವು. ನಮ್ಮ ಪೂರ್ವಜರು ನಡೆದು ಬಂದ ದಾರಿಯ ಪರಿಚಯವನ್ನು ನಾವು ಮಾಡಿಕೊಳ್ಳಲೇ ಬೇಕು. ಓದುಗರಲ್ಲಿ ಚರಿತ್ರೆಯ ಪ್ರೇಮವನ್ನು ಬಿತ್ತುತ್ತಾ, ಜೊತೆಗೆ ಕದಡಿದ ಮನಸ್ಸನ್ನು ತಹಬಂದಿಗೆ ತರಲು ವಿಭಿನ್ನವಾಗಿ ಪ್ರಯತ್ನಿಸಬೇಕೆಂಬ ಸಂದೇಶವನ್ನು ಸಮಾಜಕ್ಕೆ ಕೊಟ್ಟಿರುವ ಈ ಕೃತಿ ಕನ್ನಡಿಗರ ಮನಗೆಲ್ಲಲಿ.”